ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬೈಲಹೊಂಗಲದಲ್ಲಿ ನಡೆದ ಬೃಹತ್ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿದ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಶಾಜಾನಬಿ ಮೆಹಬೂಬಸಾಬ ಬಾನಿ ಅವರು ತಾನು ಸ್ವ ಉದ್ಯೋಗದಲ್ಲಿ ಸಾಧಿಸಿದ ಗೆಲುವನ್ನು ವಿವರಿಸಿ ‘ಎಲ್ಲಾ ಮಹಿಳೆಯರು ಒಂದಿಲ್ಲ ಒಂದು ಉದ್ಯೋಗ ಕೈಗೊಂಡು ಸ್ವಾವಲಂಬಿಯಾಗಬೇಕು’ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಅಗರಬತ್ತಿ ತಯಾರಿ, ಹೆಣಿಕೆ, ಕರಕುಶಲ ವಸ್ತುಗಳ ತಯಾರಿ, ಟೈಲರಿಂಗ್ ಮುಂತಾದ ಸ್ವ ಉದ್ಯೋಗದಲ್ಲಿ ಪಳಗಿರುವ ಇವರಿಗೆ ಕೃಷಿ ಮೇಳದಲ್ಲಿ ಕೃಷಿ ವಿಚಾರಗೋಷ್ಟಿಗಳಲ್ಲಿ ಕೇಳಿಬಂದ ಮಾಹಿತಿಯಿಂದಾಗಿ ತಾವೂ ಕೃಷಿಯಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂದು ನಿರ್ಧರಿಸಿ ಕೃಷಿಗಿಳಿದು ಯಶಸ್ವಿಯಾಗಿದ್ದಾರೆ.
ಮೂರು ಎಕರೆ ಕೃಷಿ ಜಮೀನು ಹೊಂದಿರುವ ಇವರು ತಮ್ಮ ಜಮೀನನ್ನು ಬೇರೆಯವರಿಗೆ ಲಾವಣಿ ಕೊಡುತ್ತಿದ್ದರು. ಕೃಷಿ ಮೇಳದ ನಂತರ ಲಾವಣಿ ಜಮೀನನ್ನು ಮರಳಿ ಪಡೆದು ಧಾರವಾಡಕ್ಕೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಪತಿ ಮೆಹಬೂಬ್ ಇಮಾಮ್ ಸಾಬ್ ಬಾನಿ ಇವರನ್ನು ಕೃಷಿಗೆ ಮರಳಲು ಮನವೊಲಿಸಿ ತಾವೂ ಸಹ ಕೃಷಿ ಕೆಲಸದಲ್ಲಿ ತೊಡಗಿಕೊಂಡರು. ನೀರು ಉಳಿಕೆಗೆ ಜಮೀನಿನ ಸುತ್ತಲೂ ಬದುಗಳನ್ನು ನಿರ್ಮಿಸಿ ತಮ್ಮ ಜಮೀನಿನಲ್ಲಿಯ ನೀರು ಹೊರ ಹರಿಯದಂತೆ ನೋಡಿಕೊಂಡರು.
ಮೂರು ಎಕರೆಯಲ್ಲಿ ತರಕಾರಿ ಕೃಷಿ ಮಾಡುತ್ತಿದ್ದಾರೆ. ಬದನೆ, ಟೊಮೆಟೋ, ಈರುಳ್ಳಿ, ಮೆಣಸು, ವಿವಿಧ ರೀತಿಯ ಸೊಪ್ಪು ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಬೆಳೆದ ತರಕಾರಿಯನ್ನು ಸಂತೆಗಳಲ್ಲಿ ಕುಳಿತು ಮಾರಾಟ ಮಾಡುತ್ತಾರೆ. ಮದ್ಯವರ್ಥಿಗಳಿಗೆ ತಾವು ಬೆಳೆದ ಬೆಳೆ ನೀಡದೇ ಇದ್ದುದರಿಂದ ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ. ವಾರಕ್ಕೆ 4000-5000 ರೂಪಾಯಿಯ ವರೆಗೆ ಆದಾಯ ಗಳಿಸುತ್ತಿದ್ದಾರೆ. ಕೃಷಿ ಮೇಳದಲ್ಲಿ ಇರುವ ಪ್ರಾತ್ಯಕ್ಷಿಕೆಗಳು, ಸ್ಟಾಲ್ಗಳಲ್ಲಿ ದೊರೆತ ಮಾಹಿತಿಯಿಂದಾಗಿ ಇದೆಲ್ಲಾ ಸಾಧ್ಯವಾಯಿತು ಎನ್ನುತ್ತಾರೆ ಶಾಜಾನಬಿ ಮೆಹಬೂಬಸಾಬ ಬಾನಿ.
ಕೃಷಿ ಮೇಳ ಹುಟ್ಟು ಹಾಕಿತು ಕೃಷಿ ಆಸಕ್ತಿ
